“ಹೊಳೆಯಲ್ಲಿ ಬೇಸಾಯ ಮಾಡುವುದು ಹೆಚ್ಚು ಅನುಕೂಲಕರ. ಇಲ್ಲಿ ಕೊಯ್ಲಿನ ನಂತರ ಯಾವುದೇ ಕಸ ಉಳಿಯುವುದಿಲ್ಲ. ಅಲ್ಲದೆ ಇಲ್ಲಿ ಕಳೆ ಕೂಡಾ ಬೆಳೆಯುವುದಿಲ್ಲ.”
ಕುಂತಿ ಪಾಣೆ ಮಹಾಸಮುಂದ್ ಜಿಲ್ಲೆಯ ಘೋಡಾರಿ ಗ್ರಾಮದವರಾಗಿದ್ದು, ರಾಯ್ಪುರ ಜಿಲ್ಲೆಯ ನಾಗ್ರಿ ಪಟ್ಟಣದ ಬಳಿಯ ಫಾರ್ಸಿಯಾ ಗ್ರಾಮದಲ್ಲಿ ಹರಿಯುವ ಮಹಾನದಿ ನದಿಯ ದಡದಲ್ಲಿ ಕೃಷಿ ಮಾಡುವ 50ರಿಂದ 60ಕ್ಕೂ ಹೆಚ್ಚು ರೈತರಲ್ಲಿ ಇವರೂ ಒಬ್ಬರು. "ಈಗ ಒಂದು ದಶಕದಿಂದ ಇದನ್ನು ಮಾಡುತ್ತಿದ್ದೇನೆ. ನನ್ನ ಪತಿ ಮತ್ತು ನಾನು ಇಲ್ಲಿ ಬೆಂಡೆಕಾಯಿ, ಬೀನ್ಸ್ ಮತ್ತು ಕಲ್ಲಂಗಡಿ ಕೃಷಿ ಮಾಡುತ್ತೇವೆ" ಎಂದು 57 ವರ್ಷದ ಅವರು ಹೇಳುತ್ತಾರೆ.
ಅವರು ಹೊಳೆಯ ಪಕ್ಕದಲ್ಲಿ ಕಟ್ಟಿದ್ದ ಕಾವಲು ಗುಡಿಸಲಿನಲ್ಲಿ ಕುಳಿತು ನಮ್ಮೊಡನೆ ಮಾತನಾಡುತ್ತಿದ್ದರು. ಅದು ಒಬ್ಬ ವ್ಯಕ್ತಿ ಮಲಗಲು ಸಾಕಾಗುವಷ್ಟು ಜಾಗವನ್ನು ಹೊಂದಿತ್ತು. ಸಣ್ಣ ಮಳೆಯಿಂದ ಒಬ್ಬರನ್ನು ಕಾಪಾಡುವುದಕ್ಕೂ ಅದು ಸಾಕು. ಆದರೆ ಅದರ ಮುಖ್ಯ ಉದ್ದೇಶ ರಾತ್ರಿ ಅಲ್ಲಿ ಉಳಿದು ಬೆಳೆ ತಿನ್ನಲು ಬರಬಹುದಾದ ಹಸುಗಳು ಮತ್ತು ಇತರ ಪ್ರಾಣಿಗಳನ್ನು ಓಡಿಸುವುದು.
ಮಹಾನದಿಯ ಮೇಲಿನ ಸೇತುವೆಯು ರಾಯ್ಪುರ ಜಿಲ್ಲೆಯ ಪರಗಾಂವ್ ಮತ್ತು ಮಹಾಸಮುಂದ್ ಜಿಲ್ಲೆಯ ಘೋಡಾರಿ ಗ್ರಾಮಗಳನ್ನು ಸಂಪರ್ಕಿಸುತ್ತದೆ. ಸೇತುವೆಯ ಕೆಳಗೆ ತೇಲುವ ಹಸಿರು ತೇಪೆಗಳನ್ನು ನೋಡಬಹುದು. ಎರಡೂ ಹಳ್ಳಿಗಳ ರೈತರು ಮರಳು ನದಿ ಪಾತ್ರವನ್ನು ಡಿಸೆಂಬರ್ ತಿಂಗಳಿನಿಂದ ಮೇ ಅಂತ್ಯದ ಮೊದಲ ಮಳೆಯವರೆಗೆ ಕೃಷಿ ಮಾಡಲು ತಮ್ಮೊಳಗೆ ಪಾಲು ಮಾಡಿಕೊಂಡಿದ್ದಾರೆ.


ಎಡ: ತಮ್ಮ ಹೊಲಗಳಿರುವ ನದಿಯಲ್ಲಿ ಸ್ನಾನ ಮಾಡುತ್ತಿರುವ ರೈತರು. ಬಲ: ಕುಂತಿ ಪಾಣೆ ತನ್ನ ಜಮೀನಿನ ಮುಂದೆ ಕುಳಿತಿದ್ದಾರೆ


ಕಲ್ಲಂಗಡಿ (ಎಡ) ಮತ್ತು ಸೌತೆಕಾಯಿಗಳು (ಬಲ) ಇಲ್ಲಿ ಮಹಾನದಿಯ ತೀರದಲ್ಲಿ ಮೇಲೆ ಬೆಳೆಯುತ್ತವೆ
“ನಮಗೆ ಊರಿನಲ್ಲಿ ಒಂದು ಎಕರೆ ಜಮೀನಿದೆ. ಆದರೆ ನಾವು ಇಲ್ಲಿ ಕೃಷಿ ಮಾಡುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ” ಎನ್ನುತ್ತಾರೆ ಆಕೆ.
"ನಮ್ಮ ಒಂದು ಹೊಲಕ್ಕೆ, ರಸಗೊಬ್ಬರ, ಬೀಜ, ಕಾರ್ಮಿಕರ ಕೂಲಿ ಮತ್ತು ಸಾರಿಗೆ ವೆಚ್ಚಗಳು ಸೇರಿ ಸುಮಾರು 30,000-40,000 ರೂ. ಖರ್ಚಾಗುತ್ತದೆ. ಈ ಎಲ್ಲಾ ಖರ್ಚುಗಳನ್ನು ಕಳೆದ ನಂತರ ನಮ್ಮ ಬಳಿ ಸುಮಾರು 50,000 ರೂಪಾಯಿ ಉಳಿಯುತ್ತದೆ" ಎಂದು ಕುಂತಿ ಹೇಳುತ್ತಾರೆ.
ಕುಮ್ಹಾರ್ ಸಮುದಾಯದ (ಛತ್ತೀಸಗಢದಲ್ಲಿ ಒಬಿಸಿ ಅಡಿ ಪಟ್ಟಿ ಮಾಡಲಾಗಿದೆ) ಸದಸ್ಯೆಯಾಗಿರುವ ಅವರು, ಸಮುದಾಯದ ಸಾಂಪ್ರದಾಯಿಕ ಉದ್ಯೋಗ ಕುಂಬಾರಿಕೆ ಮತ್ತು ಶಿಲ್ಪಕಲೆ ಎಂದು ಹೇಳುತ್ತಾರೆ. ದೀಪಾವಳಿ ಮತ್ತು ಪೋಲಾ ಹಬ್ಬಗಳಲ್ಲಿ ಕುಂತಿ ಮಡಕೆಗಳನ್ನು ತಯಾರಿಸುತ್ತಾರೆ. "ನಾನು ಕುಂಬಾರಿಕೆಯನ್ನು ಹೆಚ್ಚು ಇಷ್ಟಪಡುತ್ತೇನೆ ಆದರೆ ವರ್ಷಪೂರ್ತಿ ಅದನ್ನು ಮಾಡಲು ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ. ಮಹಾರಾಷ್ಟ್ರ ಮತ್ತು ಛತ್ತೀಸ್ ಗಢದ ರೈತರು ಪೋಲಾವನ್ನು ಆಚರಿಸುತ್ತಾರೆ. ಈ ಹಬ್ಬದಲ್ಲಿ, ಎತ್ತುಗಳು ಕೇಂದ್ರಬಿಂದುವಾಗಿವೆ ಮತ್ತು ಕೃಷಿ ಮತ್ತು ಕೃಷಿಯಲ್ಲಿ ಅವುಗಳ ನಿರ್ಣಾಯಕ ಪಾತ್ರವನ್ನು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಬರುತ್ತದೆ.
*****
29 ವರ್ಷದ ಜಗದೀಶ್ ಚಕ್ರಧಾರಿ ರಾಯಪುರ ಜಿಲ್ಲೆಯ ಛುರಾ ಬ್ಲಾಕ್ನ ಪರಗಾಂವ್ ಗ್ರಾಮದ ಕಲ್ಲಿನ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಆದಾಯಕ್ಕೆ ಪೂರಕವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ನದಿ ಪಾತ್ರದಲ್ಲಿ ಕುಟುಂಬಕ್ಕೆ ದೊರೆತಿರುವ ಪಾಲಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ತಮ್ಮ ವಿದ್ಯಾರ್ಥಿ ದಿನಗಳಿಂದಲೂ ತಮ್ಮ ಕುಟುಂಬವನ್ನು ಪೋಷಿಸಲು ಕಲ್ಲುಗಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರ ದೈನಂದಿನ ಕೂಲಿ 250 ರೂ.


ಎಡಕ್ಕೆ: ಜಗದೀಶ್ ಚಕ್ರಧಾರಿ ತನ್ನ ಜಮೀನಿನ ಪಕ್ಕದ ಗುಡಿಸಲಿನಲ್ಲಿ ಕುಳಿತಿದ್ದಾರೆ. ಬಲ: ತನ್ನ ಜಮೀನಿನ ಮುಂದೆ ಇಂದ್ರಮಾನ್ ಚಕ್ರಧಾರಿ


ಎಡ: ಇಂದ್ರಮಾನ್ ಚಕ್ರಧಾರಿ ಮತ್ತು ರಾಮೇಶ್ವರಿ ಚಕ್ರಧಾರಿ ತಮ್ಮ ಹೊಲದಲ್ಲಿ ನಿಂತಿದ್ದಾರೆ. ಬಲ: ಮಹಾನದಿಯ ತೀರದ ಹೊಲಗಳಲ್ಲಿ ಬೆಳೆಯುವ ಕಲ್ಲಂಗಡಿ
ಅವರ ತಂದೆ ಶತ್ರುಘ್ನ ಚಕ್ರಧಾರಿ (55), ತಾಯಿ ದುಲಾರಿಬಾಯಿ ಚಕ್ರಧಾರಿ (50) ಮತ್ತು 18 ವರ್ಷದ ಸಹೋದರಿ ತೇಜಸ್ವಿ ಕೂಡ ಮಹಾನದಿಯ ಹೊಲಗಳಲ್ಲಿ ಕೆಲಸ ಮಾಡುತ್ತಾರೆ. ಚಕ್ರಧಾರಿ ಕುಟುಂಬವೂ ಕುಮ್ಹಾರ್ ಸಮುದಾಯಕ್ಕೆ ಸೇರಿದೆ ಆದರೆ ಅವರು ಕುಂಬಾರಿಕೆಯನ್ನು ಮಾಡುವುದಿಲ್ಲ, ಏಕೆಂದರೆ "ಅದರಿಂದ ಹೆಚ್ಚು ಸಂಪಾದಿಸಲು ಸಾಧ್ಯವಿಲ್ಲ" ಎಂದು ಜಗದೀಶ್ ಹೇಳುತ್ತಾರೆ.
40 ವರ್ಷದ ಇಂದ್ರಮನ್ ಚಕ್ರಧಾರಿ ಕೂಡ ಪರಗಾಂವ್ನ ಮತ್ತೊಬ್ಬ ಕುಮ್ಹಾರ್ ಸಮುದಾಯದ ಸದಸ್ಯ. ಅವರು ಹಬ್ಬಗಳ ಸಮಯದಲ್ಲಿ ದುರ್ಗಾ ದೇವಿ ಮತ್ತು ಗಣೇಶನ ವಿಗ್ರಹಗಳನ್ನು ತಯಾರಿಸುತ್ತಾರೆ ಮತ್ತು ಈ ಕೆಲಸದಿಂದ ವರ್ಷಕ್ಕೆ ಒಂದು ಲಕ್ಷ ರೂಪಾಯಿಗಳನ್ನು ಗಳಿಸಬಹುದು ಎಂದು ಹೇಳುತ್ತಾರೆ.
"ನನ್ನ ಮಗ ನನ್ನಂತೆ ರೈತನಾಗುವುದು ನನಗೆ ಇಷ್ಟವಿಲ್ಲ. ಅವನು ಕೆಲಸ ಅಥವಾ ಬೇರೆ ಏನಾದರೂ ಮಾಡಲಿ. ಈಗ ಅವನು 11ನೇ ತರಗತಿಯಲ್ಲಿ ಓದುತ್ತಿದ್ದಾನೆ ಮತ್ತು ಕಂಪ್ಯೂಟರ್ ಬಳಕೆ ಕಲಿಯುತ್ತಿದ್ದಾನೆ. ಹೊಲದ ಕೆಲಸದಲ್ಲಿ ಅವನು ನಮಗೆ ಸಹಾಯ ಮಾಡುತ್ತಾನೆ, ಆದರೆ ಕೃಷಿಯಿಂದ ಒಬ್ಬರ ಆಹಾರ ಗಳಿಸುವಷ್ಟು ಸಂಪಾದಿಸಬಹುದಷ್ಟೇ" ಎಂದು ಇಂದ್ರಮನ್ ಹೇಳುತ್ತಾರೆ.
ಅವರ ಪತ್ನಿ ರಾಮೇಶ್ವರಿ ಚಕ್ರಧಾರಿ ಹೊಲಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಮಡಕೆಗಳನ್ನು ತಯಾರಿಸುತ್ತಾರೆ ಮತ್ತು ವಿಗ್ರಹಗಳ ಕೆತ್ತನೆ ಮಾಡುತ್ತಾರೆ: "ನನ್ನ ಮದುವೆಯ ನಂತರ ನಾನು ದಿನಗೂಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದೆ. ಇದು ನಮ್ಮ ಸ್ವಂತವಾದ್ದರಿಂದ ಇದನ್ನು ಮಾಡುತ್ತೇನೆ. ಇನ್ನೊಬ್ಬರಿಗಾಗಿ ದುಡಿಯುವುದಕ್ಕಿಂತ ಇದು ನನಗೆ ಇಷ್ಟ.”


ಎಡ: ಇಂದ್ರಮನ್ ಚಕ್ರಧಾರಿ ತಮ್ಮ ಹೊಲದಿಂದ ಕೊಯ್ಲು ಮಾಡಿದ ಬೀನ್ಸ್ ಬೆಳೆಯನ್ನು ತಮ್ಮ ಗುಡಿಸಲಿನಲ್ಲಿ ಸಂಗ್ರಹಿಸಲು ಒಯ್ಯುತ್ತಿದ್ದಾರೆ. ಬಲ: ತನ್ನ ಹೊಲದಲ್ಲಿ ಕೆಲಸ ಮಾಡುತ್ತಿರುವ ರಾಮೇಶ್ವರಿ ಚಕ್ರಧಾರಿ


ಎಡ: ಶತ್ರುಘ್ನ ನಿಷಾದ್ ತನ್ನ ಜಮೀನಿನ ಮುಂದೆ. ಬಲ: ಮಹಾನದಿಯ ಹೊಲಗಳಲ್ಲಿ ಬೆಳೆದ ಹಣ್ಣುಗಳನ್ನು ಮಾರಾಟ ಮಾಡುವ ರಸ್ತೆಬದಿಯ ಅಂಗಡಿಗಳು
ಮಹಾಸಮುಂದ್ ಜಿಲ್ಲೆಯ ಘೋಡಾರಿ ಗ್ರಾಮದ ಶತ್ರುಘ್ನ ನಿಷಾದ್ ಕುಟುಂಬವು ಮೂರು ತಲೆಮಾರುಗಳಿಂದ ಇಲ್ಲಿ ಕೃಷಿ ಮಾಡುತ್ತಿದೆ. 50 ವರ್ಷದ ಈ ರೈತನಿಗೆ ನದಿ ಪಾತ್ರದಲ್ಲಿ ಒಂದು ಪಾಲಿದೆ. "ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಇಲ್ಲಿ ಮಸ್ಕ್ ಮೆಲನ್ ಮತ್ತು ಕಲ್ಲಂಗಡಿ ಕೃಷಿ ಮಾಡುತ್ತಿದ್ದರು ಮತ್ತು ನಾವು ಅವರ ಹೊಲಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೆವು. ನಂತರ ನಾವು ಸ್ವಂತವಾಗಿ ಮಾಡಲು ಪ್ರಾರಂಭಿಸಿದೆವು" ಎಂದು ಅವರು ಹೇಳುತ್ತಾರೆ.
“ಡಿಸೆಂಬರ್ ತಿಂಗಳಿನಲ್ಲಿ ಮಣ್ಣಿಗೆ ರಸಗೊಬ್ಬರ ಹಾಕಿ ಬೀಜ ಬಿತ್ತನೆ ಮಾಡುತ್ತೇವೆ. ಫೆಬ್ರವರಿಗೆ ಕೊಯ್ಲು ಆರಂಭವಾಗುತ್ತದೆ.” ಎನ್ನುತ್ತಾರೆ ಇಲ್ಲಿ ನಾಲ್ಕು ತಿಂಗಳ ಕಾಲ ಕೃಷಿ ಮಾಡುವ ಶತ್ರುಘ್ನ ನಿಷಾದ್.
ರಾಜ್ಯದ ರಾಜಧಾನಿ ರಾಯ್ಪುರದ ಸಗಟು ತರಕಾರಿ ಮಾರುಕಟ್ಟೆ ಮಂಡಿ 42 ಕಿಲೋಮೀಟರ್ ದೂರದಲ್ಲಿದೆ. ಅರಂಗ್ ಇಲ್ಲಿನ ಬ್ಲಾಕ್ ಕೇಂದ್ರವಾಗಿದೆ ಮತ್ತು ಅದು ಇಲ್ಲಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿದೆ ಹೀಗಾಗಿ ರೈತರು ಹೆಚ್ಚಾಗಿ ಇಲ್ಲಿಗೇ ಬೆಳೆಗಳನ್ನು ತರುತ್ತಾರೆ. ಈ ಸ್ಥಳಗಳಿಗೆ ಸರಕುಗಳನ್ನು ಸಾಗಿಸುವ ರೈತರು ರ್ಯಾಕ್ (Rack) ಲೆಕ್ಕದಲ್ಲಿ ಪಾವತಿಸುತ್ತಾರೆ – ರಾಯ್ಪುರಕ್ಕೆ ಒಂದು ರ್ಯಾಕ್ ತಲುಪಿಸಲು 30 ರೂ ಬೀಳುತ್ತದೆ..
ನೀವು ಮಹಾನದಿಯ ಸೇತುವೆಯ ಮೇಲೆ ಪ್ರಯಾಣಿಸುವಾಗ ಟಾರ್ಪಾಲಿನ್ ಮತ್ತು ಮರದ ಕಂಬಗಳ ತಾತ್ಕಾಲಿಕ ಅಂಗಡಿಗಳಲ್ಲಿ ತರಕಾರಿ ಮತ್ತು ಹಣ್ಣು ಮಾರುವ ನದಿ ತೀರದ ಅನೇಕ ರೈತರನ್ನು ನೋಡಬಹುದು.
ಅನುವಾದ: ಶಂಕರ. ಎನ್. ಕೆಂಚನೂರು