“ಗುಲಾಂ ನಬಿ ಏನು ಮಾಡುತ್ತಿರುವೆ? ಹೋಗಿ ಮಲಗಿಕೋ! ನಿನ್ನ ಕಣ್ಣುಗಳನ್ನು ನೋಡು ಹೇಗಾಗಿವೆ.”
ಹಿಂದೆ ನಾನು ತಡರಾತ್ರಿಯವರೆಗೂ ಮರದ ಕೆತ್ತನೆ ಮಾಡುವುದನ್ನು ನೋಡಿ ಅಮ್ಮ ಹೀಗೆ ಬೈಯುತ್ತಿದ್ದರು. ಅವರು ಬೈದ ನಂತರವೂ ನಾನು ಕೆಲಸ ಮುಂದುವರಿಸುತ್ತಿದೆ. ನನ್ನ ಹಿಂದಿನ ಅನುಭವದ ಹಿಂದೆ ಅರವತ್ತು ವರ್ಷಗಳ ಶ್ರಮವಿದೆ. ನನ್ನ ಹೆಸರು ಗುಲಾಂನಬಿದಾರ್. ನಾನು ಕಾಶ್ಮೀರ ಶ್ರೀನಗರದ ಕಾಷ್ಠ ಶಿಲ್ಪಿ.
ನಾನು ಯಾವಾಗ ಹುಟ್ಟಿದ್ದು ಎನ್ನುವ ನಿಖರ ದಾಖಲೆಗಳಿಲ್ಲ ಆದರೆ ನನಗೀಗ 70 ಚಿಲ್ಲರೆ ವಯಸ್ಸಾಗಿದೆ ಹಾಗೂ ನನ್ನ ಇಡೀ ಬದುಕನ್ನು ಈ ನಗರದ ಮಲ್ಲಿಕ್ ಸಾಹೇಬ್ ಸಫಕಡಲ್ ಪ್ರದೇಶದಲ್ಲಿ ಕಳೆದಿದ್ದೇನೆ. ನಾನು ಓದಿದ್ದು ಇಲ್ಲೇ ಹತ್ತಿರದ ಖಾಸಗಿ ಶಾಲೆ ಎಂದರೆ. ನನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಮೂರನೇ ತರಗತಿಗೆ ಶಾಲೆಯನ್ನು ಬಿಡಬೇಕಾಗಿ ಬಂತು. ನನ್ನ ತಂದೆ ಅಲೀ ಮೊಹಮದ್ ದಾರ್ ಪಕ್ಕದ ಅನಂತನಾಗ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ನನಗೆ ಹತ್ತು ವರ್ಷವಿರುವಾಗ ಅವರು ಶ್ರೀನಗರಕ್ಕೆ ಮರಳಿದರು.
ಊರಿಗೆ ಬಂದವರು ಕುಟುಂಬ ನಿರ್ವಹಣೆಗಾಗಿ ತರಕಾರಿ ಮತ್ತು ತಂಬಾಕು ವ್ಯಾಪಾರ ಮಾಡುತ್ತಿದ್ದರು ನನ್ನ ತಾಯಿ ಅಝಿ ಮತ್ತು ನಾವು 12 ಮಕ್ಕಳು ಕುಟುಂಬದಲ್ಲಿದ್ದೆವು. ಹಿರಿಯ ಮಗನಾದ ನಾನು ಮತ್ತು ನನ್ನ ತಮ್ಮ ಬಶೀರ್ ಅಹ್ಮದ್ ದಾರ್ ನಮ್ಮ ತಂದೆಗೆ ವ್ಯಾಪಾರದಲ್ಲಿ ಸಹಾಯ ಮಾಡುತ್ತಿದ್ದೇವೆ. ಹೆಚ್ಚು ಕೆಲಸವಿಲ್ಲದ ಸಮಯದಲ್ಲಿ ನಾವು ತಿರುಗಾಡಲು ಹೋಗುತ್ತಿದ್ದೆವು. ನನ್ನ ಮಾಮು [ತಾಯಿಯ ತಮ್ಮ] ಒಮ್ಮೆ ಈ ಕುರಿತು ಅಪ್ಪನ ಬಳಿ ದೂರು ಹೇಳಿದರು. ಇದಾದ ನಂತರ ಮಾಮು ನನ್ನನ್ನು ಮರದ ಕೆತ್ತನೆಯ ಕೆಲಸಕ್ಕೆ ಸೇರಿಸಲು ಸಲಹೆ ನೀಡಿದರು.


ಗುಲಾಮ್ ನಬಿ ದಾರ್ ತಮ್ಮ ಮನೆಯಲ್ಲಿ ತಮ್ಮ ಕಾರ್ಯಾಗಾರದಲ್ಲಿ ಆಭರಣ ಪೆಟ್ಟಿಗೆಯನ್ನು (ಬಲ) ಕೆತ್ತುತ್ತಿದ್ದಾರೆ


ಅವರು ವಿನ್ಯಾಸಗಳನ್ನು ಮರದ ಮೇಲೆ ಕೆತ್ತುವ ಮೊದಲು ಬೆಣ್ಣೆ ಕಾಗದದ ಮೇಲೆ ಚಿತ್ರಿಸುತ್ತಾರೆ. ಭವಿಷ್ಯದ ಬಳಕೆಗಾಗಿ ಈ ಕಾಗದಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ
ಹೀಗೆ ನಾವಿಬ್ಬರು ಅಣ್ಣ ತಮ್ಮ ಕುಶಲಕರ್ಮಿಗಳಾಗಿ ಕೆಲಸ ಮಾಡಲಾರಂಭಿಸಿದೆವು.. ಆಗ ಪಾಲಿಶ್ ಮಾಡಿದ ವಾಲ್ ನಟ್ ಮರವನ್ನು ಕೆತ್ತುವುದು ನಮ್ಮ ಕೆಲಸವಾಗಿತ್ತು. ಅದಕ್ಕಾಗಿ ಮಾಲೀಕರು ನಮಗೆ ಸುಮಾರು ಎರಡೂವರೆ ರೂಪಾಯಿಗಳನ್ನು ಕೊಡುತ್ತಿದ್ದರು.. ಅವರು ಈ ಹಣವನ್ನು ಕೊಡಲು ಆರಂಭಿಸಿದ್ದು ನಾವು ಅವರ ಬಳಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ ನಂತರ.
ಈ ಕೆಲಸದಲ್ಲಿ ನಮ್ಮ ಎರಡನೆಯ ಗುರುಗಳೆಂದರೆ ನಮ್ಮ ನೆರೆಮನೆಯವರಾದ ಅಬ್ದುಲ್ ಅಜೀಜ್ ಭಟ್. ಅವರು ಅಂತರರಾಷ್ಟ್ರೀಯ ಗ್ರಾಹಕರನ್ನು ಹೊಂದಿರುವ ಕಾಶ್ಮೀರದ ದೊಡ್ಡ ಕರಕುಶಲ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಶ್ರೀನಗರದ ರೈನಾವಾರಿ ಪ್ರದೇಶದಲ್ಲಿನ ನಮ್ಮ ಕಾರ್ಯಾಗಾರವು ಇತರ ಅನೇಕ ನುರಿತ ಕುಶಲಕರ್ಮಿಗಳಿಂದ ತುಂಬಿತ್ತು. ಬಶೀರ್ ಮತ್ತು ನಾನು ಐದು ವರ್ಷಗಳ ಕಾಲ ಇಲ್ಲಿ ಕೆಲಸ ಮಾಡಿದೆವು.. ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ಆರಂಭಗೊಳ್ಳುತ್ತಿದ್ದ ನಮ್ಮ ಕೆಲಸವು ಸೂರ್ಯ ಮುಳುಗಿದ ನಂತರವೂ ಮುಂದುವರೆಯುತ್ತಿತ್ತು. ನಾವು ಆಭರಣ ಪೆಟ್ಟಿಗೆಗಳು, ಕಾಫಿ ಟೇಬಲ್ ದೀಪ ಇತ್ಯಾದಿಯನ್ನು ಕೆತ್ತನೆ ಮಾಡುತ್ತಿದ್ದೇವೆ. ನಾನು ಮನೆಗೆ ಹಿಂದಿರುಗಿದ ನಂತರ ಇದನ್ನು ಮತ್ತೆ ಅಭ್ಯಾಸ ಮಾಡುತ್ತಿದ್ದೆ.
ನಮ್ಮ ಕಾರ್ಖಾನೆಯಲ್ಲಿ ಒಂದು ಕೋಣೆಯಿತ್ತು. ಅದಕ್ಕೆ ಸದಾ ಬೀಗ ಹಾಕಿರಲಾಗುತ್ತಿತ್ತು. ಒಂದು ದಿನ ನಾನು ಹೇಗೋ ಕೋಣೆಯೊಳಗೆ ನುಗ್ಗಿದೆ. ಕೋಣೆಯ ಪ್ರತಿ ಮೂಲೆಯಲ್ಲೂ ಮರ, ಪಕ್ಷಿ ಇತ್ಯಾದಿ ಸೃಷ್ಟಿಯಲ್ಲಿನ ಹಲವು ವಿನ್ಯಾಸಗಳು ಹೊಳೆಯುತ್ತಿರುವುದನ್ನು ನೋಡಿ ನನಗೆ ಸ್ವರ್ಗದಲ್ಲಿರುವಂತೆ ಭಾಸವಾಯಿತು. ಅಂದಿನಿಂದ ಈ ಕಲೆಯನ್ನು ಕರಗತ ಮಾಡಿಕೊಳ್ಳುವುದೇ ನನ್ನ ಬದುಕಿನ ಧ್ಯೇಯವಾಗಿಸಿಕೊಂಡೆ. ಇದಾದ ನಂತರ ಆಗಾಗ ವಿವಿಧ ಬಗೆಯ ವಿನ್ಯಾಸಗಳನ್ನು ಗಮನಿಸುವುದು ಮತ್ತು ಅವುಗಳನ್ನು ಕೆತ್ತುವ ಪ್ರಯತ್ನ ಮಾಡುವುದನ್ನು ಮಾಡತೊಡಗಿದೆ. ಹೀಗೆ ನಾನು ನೋಡುತ್ತಿದ್ದಿದ್ದು ಇನ್ನೊಬ್ಬ ಕೆಲಸಗಾರನಿಗೆ ಗೊತ್ತಾಗಿ ಅವನು ಮಾಲೀಕರಿಗೆ ಹೇಳಿದ ಕಾರಣ ನಾನು ಸಿಕ್ಕಿಬಿದ್ದಿದೆ. ಆದರೆ ಅವರು ಕರಕುಶಲತೆ ಕುರಿತ ನನ್ನ ಕುತೂಹಲವನ್ನು ಕಂಡು ಬಿಟ್ಟುಬಿಟ್ಟರು.
ಆ ಕೋಣೆಯಲ್ಲಿನ ವಿನ್ಯಾಸಗಳನ್ನು ಕಂಡು ಕಲಿತಷ್ಟು ನಾನು ಯಾರ ಬಳಿಯೂ ಕಲಿಯಲಿಲ್ಲ.


ಎಡಕ್ಕೆ: ಗುಲಾಮ್ ಮರದ ಆಭರಣ ಪೆಟ್ಟಿಗೆ, ಕಾಫಿ ಟೇಬಲ್, ದೀಪಗಳು ಇತ್ಯಾದಿಯನ್ನು ಕೆತ್ತುತ್ತಾರೆ. ಈ ತುಣುಕನ್ನು ಬಾಗಿಲಿಗೆ ಜೋಡಿಸಲಾಗುತ್ತದೆ. ಬಲ: ಗುಲಾಮ್ ವಿನ್ಯಾಸವನ್ನು ಚಿತ್ರಿಸಿದ್ದಾರೆ ಮತ್ತು ಅದನ್ನು ಕೆತ್ತಿದ್ದಾರೆ. ಈಗ ಅವರು ನಯವಾದ ಅಂತಿಮ ನೋಟವನ್ನು ಹೊರತರಲು ಮೇಲ್ಮೈಯನ್ನು ಹೊಳಪುಗೊಳಿಸುತ್ತಾರೆ


ತಮ್ಮ ವಿನ್ಯಾಸಗಳು ಕಾಶ್ಮೀರದ ಸಸ್ಯ, ಪ್ರಾಣಿ ಮತ್ತು ಪ್ರಾಕೃತಿಕ ದೃಶ್ಯದಿಂದ ಸ್ಫೂರ್ತಿ ಪಡೆದಿವೆ ಎಂದು ಗುಲಾಮ್ ಹೇಳುತ್ತಾರೆ. ಬಲಭಾಗದಲ್ಲಿ, ಅವರು 18 ನೇ ಶತಮಾನದಲ್ಲಿ ನಿರ್ಮಿಸಲಾದ ಹರಿ ಪರ್ಬತ್ ಕೋಟೆ ಮತ್ತು ಶ್ರೀನಗರ ನಗರದ ದಾಲ್ ಸರೋವರದ ಪಶ್ಚಿಮದಲ್ಲಿರುವ ಮಖ್ದೂಮ್ ಸಾಹಿಬ್ ದೇವಾಲಯದ ರೇಖಾಚಿತ್ರವನ್ನು ತೋರಿಸುತ್ತಾರೆ
ಹಿಂದೆ ಜನರು ಚೀನಾರ್ ಮರ [Platanus orientalis], ದ್ರಾಕ್ಷಿ, ಕೇಂದ್ ಪೂಶ್ [ಗುಲಾಬಿ] ಪಾನ್ ಪೂಶ್ [ತಾವರೆ], ಇತ್ಯಾದಿ ವಿನ್ಯಾಸಗಳನ್ನು ಕೆತ್ತುತ್ತಿದ್ದರು. ಈಗ ಜನರಿಗೆ ಕೇಂದ್ ಪೂಶ್ ಮರೆತುಹೋಗಿದೆ. ಅವರು ಸುಲಭದ ಕೆತ್ತನೆಗಳಿಗೆ ಆದ್ಯತೆ ನೀಡುತ್ತಾರೆ. ಕೆಲವು ಹಳೆಯ ವಿನ್ಯಾಸಗಳನ್ನು ಮತ್ತೆ ಚಾಲ್ತಿಗೆ ತರಲು ನಾನು ಕನಿಷ್ಠ 12 ಮೂಲ ವಿನ್ಯಾಸಗಳನ್ನು ರಚಿಸಲು ನನ್ನಿಂದ ಸಾಧ್ಯವಿರುವಷ್ಟು ಪ್ರಯತ್ನಿಸಿದ್ದೇನೆ. ಅವುಗಳಲ್ಲಿ ಎರಡು ಮಾರಾಟವಾಯಿತು. ಅದರಲ್ಲಿ ಒಂದು ಮೇಜಿನ ಮೇಲೆ ಕೆತ್ತಿದ ಬಾತುಕೋಳಿ ಮತ್ತು ಇನ್ನೊಂದು ಬಳ್ಳಿಯ ವಿನ್ಯಾಸವಾಗಿತ್ತು.
1984ರಲ್ಲಿ ಜಮ್ಮು ಮತ್ತು ಕಾಶ್ಮೀರದ ಕರಕುಶಲ ನಿರ್ದೇಶನಾಲಯ ನೀಡುವ ರಾಜ್ಯ ಪ್ರಶಸ್ತಿಗಾಗಿ ನಾನು ಎರಡು ವಿನ್ಯಾಸಗಳನ್ನು ಸಲ್ಲಿಸಿದೆ. ಎರಡು ವಿನ್ಯಾಸಗಳಿಗೆ ಪ್ರಶಸ್ತಿ ದೊರಕಿತು. ಅದರಲ್ಲಿ ಒಂದು ವಿನ್ಯಾಸವು ಕಾಶ್ಮೀರದ ಹಳ್ಳಿಯ ಹೊರಗೆ ನಡೆಯುವ ಪಂಚಾಯತ್ ಸಭೆಯನ್ನು ಆಧರಿಸಿದೆ. ಈ ವಿನ್ಯಾಸದಲ್ಲಿ, ವಿವಿಧ ಸಮುದಾಯಗಳ ಜನರು, ಸಿಖ್ಖರು, ಮುಸ್ಲಿಮರು, ಪಂಡಿತರು, ಮಕ್ಕಳು ಮತ್ತು ಕೋಳಿಗಳೊಂದಿಗೆ ಮೇಜಿನ ಸುತ್ತಲೂ ಕುಳಿತಿದ್ದಾರೆ. ಮೇಜಿನ ಮೇಲೆ ಚಹಾ, ಕಪ್ ಗಳು, ಹುಕ್ಕಾ ಮತ್ತು ತಂಬಾಕಿನಿಂದ ತುಂಬಿದ ಸಮವರ್ [ಪಾತ್ರೆ] ಇದೆ. ಮೇಜಿನ ಸುತ್ತಲೂ ಮಕ್ಕಳು ಮತ್ತು ಕೋಳಿಗಳು ಇದ್ದವು.
ರಾಜ್ಯ ಪ್ರಶಸ್ತಿ ಗೆದ್ದ ನಂತರ, 1995ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಸಲುವಾಗಿ ನನ್ನ ವಿನ್ಯಾಸವನ್ನು ಕಳುಹಿಸಿಕೊಟ್ಟೆ. ಈ ಬಾರಿ ವಿನ್ಯಾಸವನ್ನು ಪೆಟ್ಟಿಗೆಯ ಮೇಲೆ ಕೆತ್ತಿದ್ದೆ. ಪೆಟ್ಟಿಗೆಯ ಪ್ರತಿಯೊಂದು ಮೂಲೆಯು ವಿಭಿನ್ನ ಮುಖಭಾವ ಮತ್ತು ಭಾವನೆಯನ್ನು ಹೊಮ್ಮಿಸುತ್ತಿತ್ತು. ನಗು, ಕಣ್ಣೀರು ಕೋಪ, ಭಯ ಹೀಗೆ ಹಲವು ಭಾವನೆಗಳನ್ನು ಅದರ ಮೇಲೆ ಕೆತ್ತಿದ್ದೆ. ಇದಲ್ಲದೆ ನಾನು ತ್ರೀಡಿ ಹೂಗಳನ್ನು ಮಾಡಿದ್ದೇನೆ. ನಾನು ಮೊದಲ ಪ್ರಯತ್ನದಲ್ಲೇ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿದ್ದೆ. ಭಾರತದ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರು ಭಾರತ ಸರ್ಕಾರದ ಜವಳಿ ಸಚಿವಾಲಯದ ಅಭಿವೃದ್ಧಿ ಆಯುಕ್ತರು (ಕರಕುಶಲ) ಮತ್ತು ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಪರವಾಗಿ ನನಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. "ಭಾರತೀಯ ಕರಕುಶಲ ವಸ್ತುಗಳ ಪ್ರಾಚೀನ ಸಂಪ್ರದಾಯಗಳನ್ನು ಜೀವಂತವಾಗಿಡುವ" ನನ್ನ ಪ್ರಯತ್ನಗಳನ್ನು ಅದು ಗುರುತಿಸಿತು.
ಇದಾದ ನಂತರ ಒಂದು ಕೆಲಸಕ್ಕೆ ಸಾವಿರ ರೂಪಾಯಿಗಳನ್ನು ನೀಡುತ್ತಿದ್ದ ಜನರು 10,000 ರೂಪಾಯಿಗಳನ್ನು ನೀಡಲಾರಂಬಿಸಿದರು. ಈ ಸಮಯದಲ್ಲಿ ನನ್ನ ಮೊದಲ ಪತ್ನಿ ಮೆಹಬೂಬ ತೀರಿಕೊಂಡರು. ನನಗೆ ಮೂವರು ಸಣ್ಣ ಮಕ್ಕಳಿದ್ದ ಕಾರಣ ಇನ್ನೊಂದು ಮದುವೆಯಾಗುವಂತೆ ಒತ್ತಾಯಿಸಿದರು. ನನ್ನ ಮಗ ಮತ್ತು ಮಗಳು 12ನೇ ತರಗತಿಯವರೆಗೆ ಹಾಗೂ ಕಿರಿಯ ಮಗಳು ಐದನೇ ತರಗತಿಯವರೆಗೆ ಓದಿದ್ದಾರೆ. ಹಿರಿಯವನಾದ ಅಭೀದ್ಗೆ ಈಗ 34 ವರ್ಷ ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ. 2012ರಲ್ಲಿ ಅವನು ತನ್ನ ಮೊದಲ ಪ್ರಯತ್ನದಲ್ಲೇ ರಾಜ್ಯ ಪ್ರಶಸ್ತಿಯನ್ನು ಗೆದ್ದಿದ್ದಾನೆ.


ʼಈ ವರ್ಷಗಳಲ್ಲಿ ಹಲವು ಗುರುಗಳು ನನ್ನ ಬದುಕನ್ನು ಬದಲಾಯಿಸಿದ್ದಾರೆ. ಅವರಲ್ಲಿ ನೂರ್ ದೀನ್ ಭಟ್ ಕೂಡ ಒಬ್ಬರುʼ ಎಂದು ಗುಲಾಮ್ ಹೇಳುತ್ತಾರೆ. ಅವರು ತನ್ನ ಗುರುಗಳ 40 ವರ್ಷಗಳ ಹಿಂದಿನ ವಿನ್ಯಾಸಗಳನ್ನು ಸಂರಕ್ಷಿಸಿದ್ದಾರೆʼ


ಗುಲಾಮ್ ಅವರ ಪುತ್ರ ಅಬೀದ್ 2012ರಲ್ಲಿ ಜಮ್ಮು ಮತ್ತು ಕಾಶ್ಮೀರದ ಕರಕುಶಲ ನಿರ್ದೇಶನಾಲಯ ನೀಡುವ ರಾಜ್ಯ ಪ್ರಶಸ್ತಿಯನ್ನು ಗೆದ್ದರು. ಬಲ: ಗುಲಾಮ್ ಅವರು ತಮ್ಮ ಕೆಲವು ಪ್ರಶಸ್ತಿಗಳೊಂದಿಗೆ
ಇಷ್ಟು ವರ್ಷಗಳಲ್ಲಿ ಹಲವು ಶಿಕ್ಷಕರು ನನ್ನ ಬದುಕನ್ನು ಬದಲಾಯಿಸಿದ್ದಾರೆ. ಅವರಲ್ಲಿ ನೂರ್ ದೀನ್ ಭಟ್ ಕೂಡ ಒಬ್ಬರು. ಅವರು ಸ್ಥಳೀಯವಾಗಿ [ನರ್ವಾರ] ಬಹಳ ಹೆಸರುವಾಸಿ. ಅವರನ್ನು ಶ್ರೀನಗರದಲ್ಲಿ ನೂರ್-ರೋರ್-ಟೊಯಿಕ್. ಇವರು ನನ್ನ ನೆಚ್ಚಿನ ಗುರು.
ದೇಹದ ಬಲಭಾಗವು ಪಾರ್ಶ್ವ ವಾಯುವಿಗೆ ಒಳಗಾಗಿ ಅವರು ಹಾಸಿಗೆ ಹಿಡಿದಿದ್ದ ಸಮಯದಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ. ಆಗ ನನಗೆ 40ರ ಹರೆಯ. ಜನರು ಅವರ ಬಳಿ ಕಾರ್ಖಾನೆಗಳಿಂದ ಮರದ ಹಲಗೆಗಳನ್ನು ತರುತ್ತಿದ್ದರು ಅವರು ಅವುಗಳನ್ನು ಹಾಸಿಗೆಯಲ್ಲಿಯೇ ಕೆತ್ತುತ್ತಿದ್ದರು. ಈ ಆದಾಯದಿಂದಲೇ ಅವರು ತಮ್ಮ ಹೆಂಡತಿ ಹಾಗೂ ಮಗನನ್ನು ನೋಡಿಕೊಳ್ಳುತ್ತಿದ್ದರು. ಜೊತೆಗೆ ನನ್ನ ತಮ್ಮಂದಿರು ಮತ್ತು ನನ್ನಂತಹ ಅನೇಕ ಯುವಕರಿಗೆ ಕೆಲಸವನ್ನು ಕಲಿಸಿದರು. ನಾನು ಮೊದಲ ಬಾರಿ ಅವರ ಬಳಿ ಹೋಗಿ ಕೆಲಸ ಕಲಿಸುವಂತೆ ಕೇಳಿಕೊಂಡಾಗ “ನೀವು ತುಂಬಾ ತಡವಾಗಿ ಬಂದಿದ್ದೀರಿ” ಎಂದು ತಮಾಷೆ ಮಾಡಿದ್ದರು.
ಉಪಕರಣಗಳು, ಸ್ಯಾಂಡ್ ಪೇಪರ್ ಮತ್ತು ವಿನ್ಯಾಸಗಳನ್ನು ಹೇಗೆ ಬಳಸುವುದು ಎಂದು ನನ್ನ ಗುರುಗಳು ನನಗೆ ಕಲಿಸಿದರು. ಅವರು ಸಾಯುವ ಮೊದಲು, ನಾನು ಎಂದಾದರೂ ನಿರಾಶೆಗೊಂಡರೆ ಅಥವಾ ನಿರಾಶನಾದರೆ ಹೂವುಗಳನ್ನು ವೀಕ್ಷಿಸಲು ತೋಟಕ್ಕೆ ಹೋಗುವಂತೆ ಅವರು ನನಗೆ ಸೂಚನೆ ನೀಡಿದರು: "ಅಲ್ಲಾಹನ ಸೃಷ್ಟಿಗಳಲ್ಲಿನ ವಕ್ರರೇಖೆ ಮತ್ತು ರೇಖೆಗಳನ್ನು ನೋಡಿ ಕಲಿಯಿರಿ." ಈ ಕರಕುಶಲತೆಯನ್ನು ಇತರರಿಗೆ ಕಲಿಸಲು ಮತ್ತು ಅದನ್ನು ಮುಂದೆ ಕೊಂಡೊಯ್ಯಲು ಅವರು ನನ್ನನ್ನು ಪ್ರೇರೇಪಿಸಿದರು.
ಮೊದಲು, ನನ್ನ ಕೈ ತುಂಬಾ ವೇಗವಾಗಿ ಚಲಿಸುತ್ತಿತ್ತು; ಯಂತ್ರದಂತೆ ಕೆಲಸ ಮಾಡುತ್ತಿದ್ದೆ. ಈಗ ನನಗೆ ವಯಸ್ಸಾಗಿದೆ ಮತ್ತು ನನ್ನ ಕೈಗಳು ಅಷ್ಟು ವೇಗವಾಗಿಲ್ಲ. ಆದರೆ ನಾನು ಯಾವಾಗಲೂ ದೇವರಿಗೆ ಕೃತಜ್ಞನಾಗಿರುತ್ತೇನೆ.
ಅನುವಾದ: ಶಂಕರ. ಎನ್. ಕೆಂಚನೂರು